Wednesday, December 15, 2010

ನಾ ಕಂಡ ನರಕಾಸುರ

ಮಾವನ ಮನೆಯಲ್ಲಿ ದೀಪಾವಳಿ ಹಬ್ಬ ಮುಗಿಸಿ ಇನ್ನೇನು ಮನೆಗೆ ಹೊರಡಬೇಕು ಎಂದು ಗಂಟು ಕಟ್ಟುತ್ತಿರುವಾಗ ಅಲ್ಲಿಗೆ ಬಂದ ಸಂಭಂಧಿಕರೊಬ್ಬರು ಇವತ್ತು ಸಂಜೆ ’ಹಂಸಗಾರು ದೇವಸ್ಥಾನದಲ್ಲಿ’ ಒಳ್ಳೇ ಆಟ ಇದ್ದು ಅಂತ ವಿವರ ಹೇಳಿದಾಗ ಕಿವಿ ನೆಟ್ಟಗಾಯಿತು. ಊರು ಕಡೆ ಆಟ ನೋಡದೇ ಸುಮಾರು ೪-೫ ವರ್ಷಗಳೇ ಕಳೆದಿತ್ತು. ನನ್ನ ಸಣ್ಣ ಮಾವನವರು ’ಏ ಇವತ್ತು ಆಟ ನೋಡ್ಕ್ಯಂಡ್ ನಾಳೆ ಬೆಳಿಗೆ ಮನೆಗೆ ಹೋಗಲಕ್ಕ’ ಅಂದಾಗ ನನಗೇ ಖುಶಿಯೇ ಆದದ್ದು. ಸರಿ ಹೇಗೂ ವ್ಯಾನ್ ಇದ್ದುದ್ದರಿಂದ ಆಟದಲ್ಲಿ ಆಸಕ್ತಿಯಿಲ್ಲದ ಒಬ್ಬರನ್ನು ಮನೆ ಕಾವಲಿಗೆ ಬಿಟ್ಟು ಮನೆಯವರೆಲ್ಲರೂ ಹೊರಟೆವು. ಅಲ್ಲಿ ಒಬ್ಬರ ಮನೆಯಲ್ಲಿ ಸಮಾರಾಧನೆಯೂ ಆಯಿತು.

ಆಟ ಶುರುವಾಗುತ್ತದೆ ಎನ್ನುವಷ್ಟರಲ್ಲಿ ನಾವಲ್ಲಿ ಬಂದು ತಲುಪಿದ್ದೆವು. ಹೊಸ್ತೋಟ ಭಾಗವತರು ಪ್ರಸಂಗದ ಬಗ್ಗೆ ವಿವರಿಸುತ್ತಿದ್ದರು.ಅವರೇ ಬರೆದ ಭೌಮಾಸುರ ಕಾಳಗ ಪ್ರಸಂಗವದು. ಭೌಮಾಸುರನೇ ನರಕಾಸುರ ಎಂದು ಎಳೆ ಎಳೆಯಾಗಿ ವಿವರಿಸಿದರು.

ಹಿಮ್ಮೇಳದವರು ಗಣಪತಿ ಸ್ತುತಿಯಿಂದ ಆರಂಬಿಸಿದರೆ ಮುಂದೆ ೨ ಚಿಕ್ಕ ಮಕ್ಕಳು ಬಾಲಗೋಪಾಲ ವೇಶವನ್ನು ನಿರ್ವಹಿಸಿದರು.
ಆರಂಭದಲ್ಲಿ ತೆರೆಕುಣಿತದೊಂದಿಗೆ ದೇವೇಂದ್ರನ ಪ್ರವೇಶವಾಯಿತು. ಹಾರಾಡಿ/ಮಟ್ಪಾಡಿ ತಿಟ್ಟಿನ ಗಂಭೀರ ಕುಣಿತ, ಗತ್ತುಗಾರಿಕೆಯ ಮಾತಿನೊಂದಿಗೆ ದೇವೇಂದ್ರನ ಪಾತ್ರಧಾರಿ ಗಮನ ಸೆಳೆದರು.ಯಾವ ಸಂದರ್ಭದಲ್ಲಿಯೂ ಅವರ ಕುಣಿತ ಹಾಗೂ ಮಾತುಗಾರಿಕೆ ಹದ ಮೀರದೆ ಹಿತವನ್ನುಂಟು ಮಾಡಿತು. ಪ್ರಸಂಗದ ಆರಂಭದಿಂದ ಅಂತ್ಯದವರೆಗೂ ಈ ಪಾತ್ರಕ್ಕೆ ಅವಕಾಶವಿತ್ತು.

ನಂತರದ ಪಾತ್ರ ನರಕಾಸುರ. ದೈತ್ಯ ಪಾತ್ರಕ್ಕೆ ಒಪ್ಪುವಂತಹ ಮೈಕಟ್ಟು, ಹೆಜ್ಜೆ ಹಾಗು ಗಟ್ಟಿತನದ ಮಾತುಗಾರಿಕೆಯಿಂದ ಪ್ರವೇಶದಿಂದ ಕೊನೆಯವರೆಗೂ ಸೂಜಿಗಲ್ಲಿನಂತೆ ಮನಸೆಳೆದ ಪಾತ್ರ. ಮುಖವರ್ಣಿಕೆ ಹಾಗೂ ಪಾತ್ರಪೋಷಣೆಯಿಂದ ಇತ್ತೀಚಿನ ದಿನಗಳಲ್ಲಿ ಉತ್ತಮ ಹೆಸರು ಮಾಡುತ್ತಿರುವ ಈ ಕಲಾವಿದ ಆ ದಿನ ಕೂಡಾ ಅದೇ ಭರವಸೆಯನ್ನು ಮೂಡಿಸುವಲ್ಲಿ ಸಫಲರಾದರು.
ಕೃಷ್ಣನ ಪಾತ್ರಧಾರಿಯು ಪ್ರವೇಶವೇ ವಿಶೇಷತೆಯಿಂದ ಕೂಡಿತ್ತು. ಭಾಗವತರು ಆ ಸಂಧರ್ಭಕ್ಕೆಂದೇ ಬರೆದ ಪದ್ಯಕ್ಕೆ ಅವರ ಅಭಿನಯ ಯಾವ ವೃತ್ತಿಪರ ಕಲಾವಿದನನ್ನೂ ಮೀರಿಸುವಂತಿತ್ತು. ಖಚಿತವಾದ ಲಯ, ಬೇಕಾದಷ್ಟೇ ಕುಣಿತ, ಅರ್ಥಗರ್ಭಿತ ಅಭಿನಯ, ಹಿತಮಿತವಾದ ಮಾತುಗಾರಿಕೆಯಿಂದ ತಮ್ಮ ಮೇಲಿನ ಭರವಸೆಯನ್ನು ಹುಸಿಗೊಳಿಸಲಿಲ್ಲ.
ಆ ದಿನ ಸತ್ಯಭಾಮೆಯ ಪಾತ್ರ ಎಲ್ಲರನ್ನೂ ಮೀರಿಸಿದಂತಹದ್ದು. ಬಹುಷಃ ಅಂತ ಪಾತ್ರಪೋಷಣೆಯನ್ನು ಇತ್ತೀಚಿನ ದಿನಗಳಲ್ಲಿ ನಾನು ಕಂಡಿದ್ದೇ ಇಲ್ಲ. ಇಲ್ಲಿ ಎಷ್ಟು ಬರೆದರೂ ಕಡಿಮೆಯೇ.
ದೇವೇಂದ್ರ ಮತ್ತು ನರಕಾಸುರನ ಬಲಗಳ ಪಾತ್ರ ಮಾಡಿದವರು ಕೂಡಾ ಗಮನ ಸೆಳೆಯುವಂತೆ ಮಾಡಿದ್ದು ಆವತ್ತಿನ ವಿಶೇಷ.

ಹಿಮ್ಮೇಳದ ಇಬ್ಬರಂತೂ ಅತ್ಯಂತ ನುರಿತ ಕಲಾವಿದರಾಗಿದ್ದರಿಂದ ಎಲ್ಲೂ ಗೊಂದಲಕ್ಕೆ ಆಸ್ಪದವಾಗಲಿಲ್ಲ.
ಭಾಗವತರು ಉತ್ತಮವಾಗಿಯೇ ಹಾಡಿದರಾದರೂ ಅವರ ಸಾಮರ್ಥ್ಯಕ್ಕೆ ತಕ್ಕುದಾಗಿ ಹಾಡಲಿಲ್ಲ. ಸ್ವಲ್ಪ ಉದಾಸೀನತೆ ಭಾಗವತಿಕೆಯಲ್ಲಿ ಎದ್ದು ಕಾಣುತ್ತಿದ್ದಂತ ದೃಶ್ಯ. ಗುರುವಿನಿಂದ ಬಂದ ಬಳುವಳಿಯೇ ಇರಬಹುದು ಎಂದುಕೊಂಡೆ.

ಬೇರೆ ಬೇರೆ ಹವ್ಯಾಸಿ ಕಲಾವಿದರು ಸಮರ್ಥ ನಿರ್ದೇಶನದಲ್ಲಿ ಒಂದು ಉತ್ತಮ ಕಥಾಭಾಗವನ್ನು ಹೇಗೆ ಒಪ್ಪಿಸಬಹುದು ಎಂಬುದಕ್ಕೆ ಜ್ವಲಂತ ಉದಾಹರಣೆ ಈ ಪ್ರಯೋಗ. ಸುಮಾರು ಮೂರು ತಾಸು ನಡೆದ ಈ ಆಟದ ಯಾವುದೇ ಭಾಗವೂ ಕೂಡಾ ಬೀಳಾಗಲಿಲ್ಲ. ಇಂತಹ ಪ್ರದರ್ಶನ ಏರ್ಪಡಿಸಿದ ಮಹಾಬಲೇಶ್ವರ ಗೋಟಗಾರು ಇವರಿಗೆ ಮತ್ತು ಆಟದ ವಿಚಾರವನ್ನು ತಿಳಿಸಿದವರಿಗೂ ಮನಸ್ಸಿನಲ್ಲಿಯೇ ಧನ್ಯವಾದ ಅರ್ಪಿಸಿ ಆಟ ಮುಗಿಸಿ ಹೊರಟಾಗ ನನ್ನ ಮನಸ್ಸಿನಲ್ಲಿ ಮೂಡಿದ ಪ್ರಶ್ನೆ. ’ಹವ್ಯಾಸಿಗಳು ಇಷ್ಟು ಒಳ್ಳೆಯ ಆಟ ಮಾಡಬಹುದೇ?’ ಎಂದು!

ಆಟದ ವಿವರ:---
ಸ್ಥಳ : ಹಂಸಗಾರು ದೇವಸ್ಥಾನ
ದಿನಾಂಕ : 7 -11-2010, ಭಾನುವಾರ, ಸಂಜೆ 6:30

ಭಾಗವತರು : ರವೀಂದ್ರ ಕೃಷ್ಣ ಭಟ್ಟ, ಅಚವೆ
ಮದ್ದಳೆ : ಎ.ಪಿ. ಫಾಟಕ್, ಬೆಂಗಳೂರು.
ಚಂಡೆ : ಸಂಪ ಲಕ್ಷ್ಮೀನಾರಾಯಣ.

ದೇವೇಂದ್ರ : ಸುಜಯೀಂದ್ರ ಹಂದೆ, ಕೋಟ
ನರಕಾಸುರ : ಸಂಜಯ, ಬೆಳಿಯೂರು
ಕೃಷ್ಣ : ಶ್ರೀಮತಿ ಸೌಮ್ಯ ಅರುಣ, ಗೋಟಗಾರು
ಸತ್ಯಭಾಮೆ : ಸದಾಶಿವ ಭಟ್ಟ, ಯಲ್ಲಾಪುರ (ಇಡಗುಂಜಿ ಮೇಳದ ಈಗಿನ ಸ್ತ್ರೀವೇಷಧಾರಿ)
ಬಲ : ರಾಘವೇಂದ್ರ ಬೆಳಿಯೂರು ಮತ್ತು ಹರೀಶ.


Tuesday, April 6, 2010

ಕಾರ್ತವೀರ್ಯ, ಕೌತುಕಮಯ ಆಟ

ಮೊನ್ನೆ ಮಾರ್ಚ್ ೨೧ ಕ್ಕೆ ಒಂದು ವಿಶೇಷ ಆಟ. ಸ್ಥಳ ಆಂಧ್ರಹಳ್ಳಿ (ಇದು ಹಂದ್ರಹಳ್ಳಿ ಹೆಸರಿನ ಅಪಭ್ರಂಶು) ಸಮೀಪದ ಪ್ರಸನ್ನ ಚಂದ್ರಶೇಖರ ಆಶ್ರಮ, ಪ್ರಸಂಗ ಕಾರ್ತವೀರ್ಯ.

ಕರೆ ಬಂದಾಗ ಒಪ್ಪಿದೆ, ಯಾಕೆಂದರೆ ಆಟವಿಲ್ಲದೇ ತಿಂಗಳು ಮೇಲಾಗಿ ಕೈ ತುರಿಸುತಿತ್ತು. ಅಲ್ಲದೇ ಹೆಸರಾಂತ ಕಲಾವಿದರೂ ಇದ್ದರು. ಮೇಲಾಗಿ ಆಗಷ್ಟೇ ಅಪರೂಪಕ್ಕೆ ಚಂಡೆ ರಿಪೇರಿ ಮಾಡಿದ್ದೆ ಉತ್ತಮ ಸ್ವರವೂ ಬಂದಿತ್ತು.

ಎಂದಿನಂತೆ ಅರ್ಧ ಗಂಟೆ ಮೊದಲು ಅಲ್ಲಿ ತಲುಪಿದೆ. ಚೀಲ ಕೆಳಗಿಡುವ ಹೊತ್ತಿಗೆ ಅಲ್ಲಿಗೆ ಬಂದ ಸತ್ಯಣ್ಣ ಒಳ್ಳೆ ಚಾ ಮಾಡಿದ್ದ ಕುಡಿಯ ಎಂದು ಆತ್ಮೀಯವಾಗಿ ನುಡಿದ. ಚಾ ಕುಡಿಯುವಷ್ಟರಲ್ಲೇ ಭಾಗವತರು ಮತ್ತು ಮದ್ದಲೆಗಾರರು ತಯಾರಾಗಿದ್ದರು. ಅಂದ ಹಾಗೆ ಅವತ್ತಿನ ಕಲಾವಿದರು .ಕೊಳಗಿ ಕೇಶವ ಹೆಗಡೆ(ಭಾಗವತಿಕೆ), ಸಾಗರ ರಾಜೇಶ ಆಚಾರ್ಯ(ಮದ್ದಳೆ) ಚಂಡೆಗೆ ನಾನು. ಕಲಗದ್ದೆ ವಿನಾಯಕ ಹೆಗಡೆ(ಕಾರ್ತವೀರ್ಯ), ಬೆಳಿಯೂರು ಸಂಜಯ (ರಾವಣ) ಮತ್ತಿತರ ಕಲಾವಿದರಿದ್ದರು. ನನ್ನ ಹೊಸ ರೂಪದ ಚಂಡೆ ಶೃತಿ ಮಾಡಲು ಕೆಲವೇ ಸೆಕೆಂಡುಗಳು ಸಾಕಾದವು. ಪೇಟ ಸುತ್ತುವುದರಲ್ಲಿ ’ಎಕ್ಸ್ಪರ್ಟ್’ಆದ ಕಾರಣ ಅದು ನನಗೆ ಯಾವತ್ತು ಸಮಸ್ಯೆಯಾಗುವುದಿಲ್ಲ. ಭಾಗವತರು ಕಪ್ಪೆರಡರ ಶೃತಿ ಇರಿಸಿದ್ದರು.

ಇಲ್ಲಿ ಇನ್ನೊಂದು ವಿಷಯ ಹೇಳಲೇಬೇಕು ಎನಿಸುತ್ತಿದೆ.... ಏಕೋ ಏನೋ! ನಾನು ಮತ್ತು ಕೇಶವ ಭಾಗವತರು ರಂಗದ ಹೊರಗೆ ಎಷ್ಟೇ ಆತ್ಮೀಯರಾಗಿದ್ದರೂ, ರಂಗದ ಮೇಲಿನ ವೈಯುಕ್ತಿಕ ಸಾಧನೆಗಳಿಗೆ ಪರಸ್ಪರ ಗೌರವಾದಿಗಳಿದ್ದರೂ ನಮ್ಮಿಬ್ಬರಿಗೆ ರಂಗದಲ್ಲಿ ಆಗಿ ಬರುವುದಿಲ್ಲ. ಆದರೆ ಇದು ಇಬ್ಬರಿಗೂ ತಿಳಿದ ಮತ್ತು ಪರಸ್ಪರ ’ಡಿಸ್ಕಸ್’ ಮಾಡಿಕೊಳ್ಳಲಾಗದ ಕಹಿಸತ್ಯ. ಇಬ್ಬರಿಗೂ ಅವರದೇ ಆದ ದೌರ್ಬಲ್ಯ ಹಾಗೂ ಸಾಮರ್ಥ್ಯವಿದೆ. ಆದರೆ ದೌರ್ಬಲ್ಯವನ್ನು ಮಾತ್ರ ಎತ್ತಿ ತೋರಿಸುವ( ಎಲ್ಲರ ಎದುರಿಗೆ) ಗುಣವನ್ನು(ಅವರು ಎಂತಹ ಮಹಾನ್ ಕಲಾವಿದರೇ ಆಗಿರಲಿ) ನಾನಂತು ಸುತಾರಾಂ ಉಪ್ಪುತ್ತಿರಲಿಲ್ಲ. ನನ್ನ ಇಡೀ ರಂಗ ಜೀವನದಲ್ಲಿ ನಾನು ಕೆಲಸ ಮಾಡಿದ ಅತಿರಥ ಮಹಾರಥಲ್ಲಿ ಒಬ್ಬರು ಪ್ರಖ್ಯಾತ ಹಾಸ್ಯಗಾರರೊಬ್ಬರು ಮಾತ್ರ ರಂಗದಲ್ಲಿ ಒಮ್ಮೆ ಹಿಂತಿರುಗಿ ನನ್ನನ್ನು ನೋಡಿದ್ದರು*. ನಂತರ ಅವರಲ್ಲಿ ಮಾತುಕಥೆ ಜಗಳದವರೆಗೂ ಮುಂದುವರೆದಿತ್ತು. ಇದಕ್ಕೆ ನಾನು ಯಕ್ಷಗಾನವನ್ನು ಕಲಿತ ರೀತಿ, ಅರಗಿಸಿಕೊಂಡ ಕ್ರಮ, ಮತ್ತು ತ್ರಿವಿಕ್ರಮ ಸಾಧನೆ**ಗಳೇ ಕಾರಣವಾಗಿರಬಹುದು. ನನ್ನಷ್ಟಕ್ಕೇ ನಾನೇ ಇಚ್ಚಿಸಿ ಆಯ್ಕೆ ಮಾಡಿಕೊಂಡ ವಿಷಯಗಳು ಎರಡು. ಯಕ್ಷಗಾನ ಮತ್ತು ನನ್ನ ಹೆಂಡತಿ. ದೇವರ ದಯದಿಂದ ಎರಡೂ ವಿಷಯಗಳಲ್ಲಿಯೂ ಸಾರ್ಥಕ್ಯ ಹೊಂದಿದ ಭಾವ ನನ್ನದು. ನಾನು ಧಾರೇಶ್ವರ ಭಾಗವತರನ್ನು ಬಿಟ್ಟರೆ ಉಳಿದ ಎಲ್ಲಾ ಭಾಗವತರೊಂದಿಗೂ ಹಿಮ್ಮೇಳದಲ್ಲಿ ಭಾಗವಹಿಸಿದ್ದೇನೆ. ಸಾಮಾನ್ಯ ಎಲ್ಲ ಭಾಗವರೊಂದಿಗೂ ಆಟದ ಚರ್ಚೆ ಮಾಡುತ್ತೇನೆ. ಆದರೆ ಕೇಶವ ಭಾಗವತರೊಡನೆ ನನಗೆ ಇದು ಸಾಧ್ಯವಾಗುವುದಿಲ್ಲ... ಏಕೋ ನಾಕಾಣೆ!!!
ಇರಲಿ ಕಥೆ ಎತ್ತಲೋ ಸಾಗುತ್ತಿದೆ....ಆಟದ ವಿಷಯಕ್ಕೆ ಬರುವ

*ರಂಗದಲ್ಲಿ ಯಾವುದೇ ಕಲಾವಿದ ಕುಣಿಯುತ್ತಿರುವಾಗ ಚಂಡೆಯವನನ್ನೋ ಅಥವಾ ಮದ್ದಳೆಗಾರನನ್ನು ಹಿಂತಿರುಗಿ ನೋಡಿದ ಅಂತಾದರೆ ಹಿಮ್ಮೇಳ ಕಲಾವಿದರು ತನ್ನ (ಕುಣಿಯುವವನ) ಸಾಮರ್ಥ್ಯಕ್ಕೋ ಅಥವಾ ತಾಳಕ್ಕೋ..ಲಯಕ್ಕೋ ಸರಿಯಾಗಿ ಬಾರಿಸುತ್ತಿರಲಿಲ್ಲ ಎಂದೇ ಅರ್ಥ.

** ನನ್ನ ಬಿಡುವಿನ, ಪ್ರಯಾಣದ ವೇಳೆಯಲ್ಲಿ ಯಕ್ಷಗಾನದ ಪದ್ಯಗಳು.. ಅದರ ತಾಳ.. ಲಯವನ್ನು ಅಭ್ಯಾಸ ಮಾಡುವುದರ ಹೊರತು ನಾನು ಇನ್ನೇನು ಮಾಡುತ್ತಿರಲಿಲ್ಲ. ದೂರದೂರಿನ ಕಾಲೇಜಿನಲ್ಲಿ ಓದುತ್ತಿರುವಾಗ ನಡೆಯುವಾಗಲು ತಾಳಗಳ (ಬೇರೆ ಬೇರೆ) ಲಯಕ್ಕೆ ಸರಿಯಾಗಿ ನಡೆಯುತ್ತಿದ್ದೆ. ಇದರಿಂದ ಹಲವಾರು ಬಾರಿ ಹೆಣ್ಣು ಮಕ್ಕಳಿಂದ ನಗೆ ಪಾಟಲಿಗೆ ಗುರಿಯಾದದ್ದು ಇದೆ. ಒಂದು ಸಲವಂತು ನನ್ನ ಸಂಭದಿಕಳೊಬ್ಬಳು ನಮ್ಮ ಮನೆಗೆ ’ಅವ ಕಾಲು ಉಳಿಶಿಕಂಡಿದ್ದ ಕಾಣ್ತು ಒಂಥರಾ ನಡಿತ’ ಎಂದು ಫೋನ್ ಮಾಡಿದ್ದಳು.

(ಮುಂದುವರೆಯುವುದು)