Tuesday, April 6, 2010

ಕಾರ್ತವೀರ್ಯ, ಕೌತುಕಮಯ ಆಟ

ಮೊನ್ನೆ ಮಾರ್ಚ್ ೨೧ ಕ್ಕೆ ಒಂದು ವಿಶೇಷ ಆಟ. ಸ್ಥಳ ಆಂಧ್ರಹಳ್ಳಿ (ಇದು ಹಂದ್ರಹಳ್ಳಿ ಹೆಸರಿನ ಅಪಭ್ರಂಶು) ಸಮೀಪದ ಪ್ರಸನ್ನ ಚಂದ್ರಶೇಖರ ಆಶ್ರಮ, ಪ್ರಸಂಗ ಕಾರ್ತವೀರ್ಯ.

ಕರೆ ಬಂದಾಗ ಒಪ್ಪಿದೆ, ಯಾಕೆಂದರೆ ಆಟವಿಲ್ಲದೇ ತಿಂಗಳು ಮೇಲಾಗಿ ಕೈ ತುರಿಸುತಿತ್ತು. ಅಲ್ಲದೇ ಹೆಸರಾಂತ ಕಲಾವಿದರೂ ಇದ್ದರು. ಮೇಲಾಗಿ ಆಗಷ್ಟೇ ಅಪರೂಪಕ್ಕೆ ಚಂಡೆ ರಿಪೇರಿ ಮಾಡಿದ್ದೆ ಉತ್ತಮ ಸ್ವರವೂ ಬಂದಿತ್ತು.

ಎಂದಿನಂತೆ ಅರ್ಧ ಗಂಟೆ ಮೊದಲು ಅಲ್ಲಿ ತಲುಪಿದೆ. ಚೀಲ ಕೆಳಗಿಡುವ ಹೊತ್ತಿಗೆ ಅಲ್ಲಿಗೆ ಬಂದ ಸತ್ಯಣ್ಣ ಒಳ್ಳೆ ಚಾ ಮಾಡಿದ್ದ ಕುಡಿಯ ಎಂದು ಆತ್ಮೀಯವಾಗಿ ನುಡಿದ. ಚಾ ಕುಡಿಯುವಷ್ಟರಲ್ಲೇ ಭಾಗವತರು ಮತ್ತು ಮದ್ದಲೆಗಾರರು ತಯಾರಾಗಿದ್ದರು. ಅಂದ ಹಾಗೆ ಅವತ್ತಿನ ಕಲಾವಿದರು .ಕೊಳಗಿ ಕೇಶವ ಹೆಗಡೆ(ಭಾಗವತಿಕೆ), ಸಾಗರ ರಾಜೇಶ ಆಚಾರ್ಯ(ಮದ್ದಳೆ) ಚಂಡೆಗೆ ನಾನು. ಕಲಗದ್ದೆ ವಿನಾಯಕ ಹೆಗಡೆ(ಕಾರ್ತವೀರ್ಯ), ಬೆಳಿಯೂರು ಸಂಜಯ (ರಾವಣ) ಮತ್ತಿತರ ಕಲಾವಿದರಿದ್ದರು. ನನ್ನ ಹೊಸ ರೂಪದ ಚಂಡೆ ಶೃತಿ ಮಾಡಲು ಕೆಲವೇ ಸೆಕೆಂಡುಗಳು ಸಾಕಾದವು. ಪೇಟ ಸುತ್ತುವುದರಲ್ಲಿ ’ಎಕ್ಸ್ಪರ್ಟ್’ಆದ ಕಾರಣ ಅದು ನನಗೆ ಯಾವತ್ತು ಸಮಸ್ಯೆಯಾಗುವುದಿಲ್ಲ. ಭಾಗವತರು ಕಪ್ಪೆರಡರ ಶೃತಿ ಇರಿಸಿದ್ದರು.

ಇಲ್ಲಿ ಇನ್ನೊಂದು ವಿಷಯ ಹೇಳಲೇಬೇಕು ಎನಿಸುತ್ತಿದೆ.... ಏಕೋ ಏನೋ! ನಾನು ಮತ್ತು ಕೇಶವ ಭಾಗವತರು ರಂಗದ ಹೊರಗೆ ಎಷ್ಟೇ ಆತ್ಮೀಯರಾಗಿದ್ದರೂ, ರಂಗದ ಮೇಲಿನ ವೈಯುಕ್ತಿಕ ಸಾಧನೆಗಳಿಗೆ ಪರಸ್ಪರ ಗೌರವಾದಿಗಳಿದ್ದರೂ ನಮ್ಮಿಬ್ಬರಿಗೆ ರಂಗದಲ್ಲಿ ಆಗಿ ಬರುವುದಿಲ್ಲ. ಆದರೆ ಇದು ಇಬ್ಬರಿಗೂ ತಿಳಿದ ಮತ್ತು ಪರಸ್ಪರ ’ಡಿಸ್ಕಸ್’ ಮಾಡಿಕೊಳ್ಳಲಾಗದ ಕಹಿಸತ್ಯ. ಇಬ್ಬರಿಗೂ ಅವರದೇ ಆದ ದೌರ್ಬಲ್ಯ ಹಾಗೂ ಸಾಮರ್ಥ್ಯವಿದೆ. ಆದರೆ ದೌರ್ಬಲ್ಯವನ್ನು ಮಾತ್ರ ಎತ್ತಿ ತೋರಿಸುವ( ಎಲ್ಲರ ಎದುರಿಗೆ) ಗುಣವನ್ನು(ಅವರು ಎಂತಹ ಮಹಾನ್ ಕಲಾವಿದರೇ ಆಗಿರಲಿ) ನಾನಂತು ಸುತಾರಾಂ ಉಪ್ಪುತ್ತಿರಲಿಲ್ಲ. ನನ್ನ ಇಡೀ ರಂಗ ಜೀವನದಲ್ಲಿ ನಾನು ಕೆಲಸ ಮಾಡಿದ ಅತಿರಥ ಮಹಾರಥಲ್ಲಿ ಒಬ್ಬರು ಪ್ರಖ್ಯಾತ ಹಾಸ್ಯಗಾರರೊಬ್ಬರು ಮಾತ್ರ ರಂಗದಲ್ಲಿ ಒಮ್ಮೆ ಹಿಂತಿರುಗಿ ನನ್ನನ್ನು ನೋಡಿದ್ದರು*. ನಂತರ ಅವರಲ್ಲಿ ಮಾತುಕಥೆ ಜಗಳದವರೆಗೂ ಮುಂದುವರೆದಿತ್ತು. ಇದಕ್ಕೆ ನಾನು ಯಕ್ಷಗಾನವನ್ನು ಕಲಿತ ರೀತಿ, ಅರಗಿಸಿಕೊಂಡ ಕ್ರಮ, ಮತ್ತು ತ್ರಿವಿಕ್ರಮ ಸಾಧನೆ**ಗಳೇ ಕಾರಣವಾಗಿರಬಹುದು. ನನ್ನಷ್ಟಕ್ಕೇ ನಾನೇ ಇಚ್ಚಿಸಿ ಆಯ್ಕೆ ಮಾಡಿಕೊಂಡ ವಿಷಯಗಳು ಎರಡು. ಯಕ್ಷಗಾನ ಮತ್ತು ನನ್ನ ಹೆಂಡತಿ. ದೇವರ ದಯದಿಂದ ಎರಡೂ ವಿಷಯಗಳಲ್ಲಿಯೂ ಸಾರ್ಥಕ್ಯ ಹೊಂದಿದ ಭಾವ ನನ್ನದು. ನಾನು ಧಾರೇಶ್ವರ ಭಾಗವತರನ್ನು ಬಿಟ್ಟರೆ ಉಳಿದ ಎಲ್ಲಾ ಭಾಗವತರೊಂದಿಗೂ ಹಿಮ್ಮೇಳದಲ್ಲಿ ಭಾಗವಹಿಸಿದ್ದೇನೆ. ಸಾಮಾನ್ಯ ಎಲ್ಲ ಭಾಗವರೊಂದಿಗೂ ಆಟದ ಚರ್ಚೆ ಮಾಡುತ್ತೇನೆ. ಆದರೆ ಕೇಶವ ಭಾಗವತರೊಡನೆ ನನಗೆ ಇದು ಸಾಧ್ಯವಾಗುವುದಿಲ್ಲ... ಏಕೋ ನಾಕಾಣೆ!!!
ಇರಲಿ ಕಥೆ ಎತ್ತಲೋ ಸಾಗುತ್ತಿದೆ....ಆಟದ ವಿಷಯಕ್ಕೆ ಬರುವ

*ರಂಗದಲ್ಲಿ ಯಾವುದೇ ಕಲಾವಿದ ಕುಣಿಯುತ್ತಿರುವಾಗ ಚಂಡೆಯವನನ್ನೋ ಅಥವಾ ಮದ್ದಳೆಗಾರನನ್ನು ಹಿಂತಿರುಗಿ ನೋಡಿದ ಅಂತಾದರೆ ಹಿಮ್ಮೇಳ ಕಲಾವಿದರು ತನ್ನ (ಕುಣಿಯುವವನ) ಸಾಮರ್ಥ್ಯಕ್ಕೋ ಅಥವಾ ತಾಳಕ್ಕೋ..ಲಯಕ್ಕೋ ಸರಿಯಾಗಿ ಬಾರಿಸುತ್ತಿರಲಿಲ್ಲ ಎಂದೇ ಅರ್ಥ.

** ನನ್ನ ಬಿಡುವಿನ, ಪ್ರಯಾಣದ ವೇಳೆಯಲ್ಲಿ ಯಕ್ಷಗಾನದ ಪದ್ಯಗಳು.. ಅದರ ತಾಳ.. ಲಯವನ್ನು ಅಭ್ಯಾಸ ಮಾಡುವುದರ ಹೊರತು ನಾನು ಇನ್ನೇನು ಮಾಡುತ್ತಿರಲಿಲ್ಲ. ದೂರದೂರಿನ ಕಾಲೇಜಿನಲ್ಲಿ ಓದುತ್ತಿರುವಾಗ ನಡೆಯುವಾಗಲು ತಾಳಗಳ (ಬೇರೆ ಬೇರೆ) ಲಯಕ್ಕೆ ಸರಿಯಾಗಿ ನಡೆಯುತ್ತಿದ್ದೆ. ಇದರಿಂದ ಹಲವಾರು ಬಾರಿ ಹೆಣ್ಣು ಮಕ್ಕಳಿಂದ ನಗೆ ಪಾಟಲಿಗೆ ಗುರಿಯಾದದ್ದು ಇದೆ. ಒಂದು ಸಲವಂತು ನನ್ನ ಸಂಭದಿಕಳೊಬ್ಬಳು ನಮ್ಮ ಮನೆಗೆ ’ಅವ ಕಾಲು ಉಳಿಶಿಕಂಡಿದ್ದ ಕಾಣ್ತು ಒಂಥರಾ ನಡಿತ’ ಎಂದು ಫೋನ್ ಮಾಡಿದ್ದಳು.

(ಮುಂದುವರೆಯುವುದು)

1 comment: