Tuesday, November 3, 2009

ಮರೆಯಾದ ಮಹಾಬಲ

ಕೆರೆಮನೆ ಮಹಾಬಲ ಹೆಗಡೆ ಯಕ್ಷಗಾನ ಪ್ರಪಂಚ ಕಂಡ ಸರ್ವೋತ್ಕೃಷ್ಠ ಕಲಾವಿದ. ಹಿಮ್ಮೇಳ, ಮುಮ್ಮೇಳ ಎರಡರಲ್ಲೂ ಪರಿಣತಿ ಹೊಂದಿದ್ದ ಹೆಗಡೆ ಹಿಂದೂಸ್ತಾನಿ ಸಂಗೀತವನ್ನು ಅಭ್ಯಾಸ ಮಾಡಿಕೊಂಡಿದ್ದರು. ಇವರ ಅಳಿಯ (ಮಗಳ ಗಂಡ) ಪರಮೇಶ್ವರ ಹೆಗಡೆ ಪ್ರಖ್ಯಾತ ಹಿಂದೂಸ್ತಾನಿ ಸಂಗೀತಗಾರರು.

ಇವರ ಮೊದಲ ವೇಶವನ್ನು ನಾನು ರಂಗದಲ್ಲಿ ನೋಡಿದ್ದು ಪಟ್ಟಾಭಿಷೇಕದ ದಶರಥ, ಸಾಗರದಲ್ಲಿ ೧೯೮೯ ರ ಮಳೆಗಾಲದಲ್ಲಿ. ಆ ದಿವಸ ಇವರ ದಶರಥ, ಡಿ.ಜಿ. ಹೆಗಡೆ ಯವರ ರಾಮ, ಸುಬ್ರಹ್ಮಣ್ಯರ ಲಕ್ಷ್ಮಣ, ಮಂಟಪರ ಕೈಕೆ, ವಾಸುದೇವ ಸಾಮಗರ ಭರತ, ಕುಂಜಾಲು ಮಂಥರೆ. ಇಂತಾ ದಿಗ್ಗಜರ ಮೇಳಕ್ಕೆ ಆ ಕಾಲದಲ್ಲಿ ಅದ್ಭುತವೆನೆಸುವ ಕಂಠಸಿರಿಯನ್ನು ಹೊಂದಿದ್ದ ವಿದ್ವಾನ್ ಗಣಪತಿ ಭಟ್ಟರ ಭಾಗವತಿಕೆ. ಅಂತಾ ದಶರಥನನ್ನು ಈ ವರೆಗೂ ನಾನು ಕಂಡಿದ್ದೆ ಇಲ್ಲ. ಆ ವರ್ಷವೇ ಶುರುವಾದದ್ದು ಬಚ್ಚಗಾರು ಮೇಳ. ಅದರಲ್ಲಿ ಮಹಾಬಲ ಹೆಗಡೆ ಪ್ರಮುಖ ಪಾತ್ರಧಾರಿ. ಸಾಗರದ ಸುತ್ತ ಮುತ್ತ ನಡೆದ ಯಾವ ಆಟವನ್ನು ಬಿಡದೆ ನೋಡಿದ್ದೇನೆ. ಇವರ ದುಷ್ಟಬುದ್ದಿಯ ಪಾತ್ರಕ್ಕೆ ಹೆದರಿ ಹಿಂದೆ ಹೋಗಿ ಕುಳಿತಿದ್ದು ಉಂಟು. ಸರಿಸಾಟಿಯೇ ಇಲ್ಲದಂತ ಲಯಜ್ನಾನ, ಮನಸೆಳೆಯುವ ಕಂಠಸಿರಿ, ಪಾತ್ರಕ್ಕೆ ಮೀಸಲಾದ ವಿಶೇಷ ಕುಣಿತಗಳು, ಪದ್ಯ ನಿಂತಲ್ಲಿಗೆ ಮಾತನ್ನು ಆರಂಬಿಸುವ ವಿಧಾನ, ಅಕ್ಷರ ಅಕ್ಷರವನ್ನೂ ಬರೆದು ದಾಖಲಿಸಬಹುದಾದಷ್ಟು ಉತ್ತಮ ಸಾಹಿತ್ಯ, ಶೃತಿಜ್ಜ್ನಾನ, ವೇಶಭೂಷಣಗಳಲ್ಲಿ ತೋರುವ ಅಪೂರ್ವ ಆಸಕ್ತಿ, ಎಲ್ಲದರಲ್ಲೂ ಪರಿಪೂರ್ಣತೆಯನ್ನು ಬಯಸುವ ಹಪಹಪಿಕೆ ಮುಂತಾದ ವಿಶೇಷತೆಯಿಂದಾಗಿ ಬೇರೆಲ್ಲಾ ಕಲಾವಿದರಿಗಿಂತಾ ಭಿನ್ನವಾಗಿ ಎದ್ದು ಕಾಣುವ ಹೆಗಡೆಯವರೊಂದಿಗೆ ಯಕ್ಷಗಾನದಲ್ಲಿ ಭಾಗವಹಿಸುವ ಪುಣ್ಯ ನನಗೂ ಒದಗಿ ಬಂದಿತ್ತು.

ಅದು ಭುವನಗಿರಿ ಮೇಳ.೧೯೯೪-೯೫-೯೬ ರ ಸಮಯದಲ್ಲಿ ಮೆರೆದ ಮೇಳ. ಶಿರಸಿ ಮೇಳವನ್ನು ತ್ಯಜಿಸಿದ ಶಿರಳಗಿ ಭಾಸ್ಕರ ಜೋಶಿಯವರು ಭುವನಗಿರಿ ಮೇಳವನ್ನು ಕಟ್ಟಿದ್ದರು. ಮೇಳದಲ್ಲಿ ಮಹಾಬಲ ಹೆಗಡೆಯವರು, ಗೋಡೆ, ಡಿ.ಜಿ., ಕೊಳಗಿ ಅನಂತ ಹೆಗಡೆ, ಜೋಷಿ, ಕಣ್ಣೀಮನೆ ಗಣಪತಿ, ನರಸಿಂಹ ಚಿಟ್ಟಾಣಿ, ಹಾರ್ಸಿಮನೆ, ಸುಬ್ರಾಯ ಭಟ್ಟ ಮುಂತಾದ ಹೆಸರಾಂತ ಕಲಾವಿದ್ದರು.ಹಿಮ್ಮೇಳದಲ್ಲಿ ಗಿರಿಗಡ್ಡೆ, ಕೊಳಗಿ ಮಾಧವ, ಪರಮೇಶ್ವರ ಭಂಡಾರಿ, ಕೆಸರಕೊಪ್ಪ ವಿಘ್ನೇಶ್ವರ, ಅಶೋಕ ಕ್ಯಾಸನೂರು ಮತ್ತು ನಾನು.ವಾರಕ್ಕೆ ೨-೩ ಕಾರ್ಯಕ್ರಮ ಇರುತ್ತಿತ್ತು.

ನಾನು ಎಲ್ಲಾ ಕಾರ್ಯಕ್ರಮಗಳಲ್ಲೂ ಭಾಗವಹಿಸುತ್ತಿರಲಿಲ್ಲ, ಕೆಲವೊಂದು ಆಟಕ್ಕೆ ಮಾತ್ರ ಹೋಗಿದ್ದೇನೆ. ಒಂದು ಕಾರ್ಯಕ್ರಮ ತಾರಗೋಡು ಎಂಬಲ್ಲಿ. ಆ ದಿನ ಪಟ್ಟಾಭಿಷೇಕ - ಗದಾಯುದ್ಧ. ಮಹಾಬಲ ಹೆಗಡೆಯವರ ದಶರಥ, ಗೋಡೆಯವ ಕೌರವ. ಮೊದಲು ಚಂಡೆಗೆ ಹೋಗುವುದು ನಾನೆ ಆಗಿತ್ತು. ಚೀಲದಿಂದ ಚಂಡೆ ತೆಗೆಯುವಷ್ಟರಲ್ಲೆ ಒಬ್ಬರು ಬಂದು ಹೇಳಿದರು, ಮಹಾಬಲ ಹೆಗಡೆಯವರು ಕರೆಯುತ್ತಿದ್ದಾರೆ ಎಂದು. ಹುಂಬನಂತೆ ಇದ್ದ ನಾನು ಅವರ ಎದುರಿಗೆ ಹೋಗಿ ನಿಂತೆ. ಅವರು ಹೇಳಿದ್ದು ಇಷ್ಟೆ " ಹಾರ್ಮೋನಿಯಂನಲ್ಲಿ ಮೊದಾಲ್ನ ಮನೆ ಶೃತಿ ಹಾಕು" ಎಂದು. ಸರಿ ಆಟ ಪ್ರಾರಂಭವಾಯಿತು ಮೊದಲಿಗೆ ದಶರಥನ ಒಡ್ಡೋಲಗ. ೨ ಪದ್ಯ ಮುಗಿದಿತ್ತಷ್ಟೆ, ಮತ್ತೊಂದು ಪಾತ್ರ ಮಾತಾಡುತ್ತಿರುವಾಗ ರಂಗದಲ್ಲಿ ಚಂಡೆ ಬಾರಿಸುತ್ತಿದ್ದ ನನ್ನಲ್ಲಿಗೆ ನಿಧಾನವಾಗಿ ಬಂದು "ಇನ್ನೊಂದು ಮನೆ ಮೇಲೆ ಹಾಕು" ಎಂದು ಆಜ್ನಾಪಿಸಿದರು. ಸರಿ ನಾನು ಭಾಗವತರಲ್ಲಿ ಹೇಳಿದಾಗ ಅವರಿಗೂ ಅದೇ ಬೇಕಾಗಿತ್ತು. ಆದರೆ ಆ ಸಮಯದಲ್ಲಿ ನನಗೆ ಸರಿಯಾಗಿ ಶೃತಿ ಮಾಡಲು ಬರುತ್ತಿರಲಿಲ್ಲ. ನಿಧಾನವಾಗಿ ಒದ್ದಾಡುತ್ತಾ ಇರುವಾಗ ಅವರು ಓರೆಗಣ್ಣಿನಲ್ಲಿ ಗಮನಿಸುತ್ತಾ ಇದ್ದುದು ನನಗೆ ಗೊತ್ತಾಯಿತು. ಒಮ್ಮೆ ಮೆಲುವಾಗಿ ತಟ್ಟಿದೆ. ಆದರೆ ಶಬ್ದ ಸ್ವಲ್ಪ ಹೆಚ್ಚಾಯಿತೋ ಏನೋ ತಕ್ಷಣ ಸಿಟ್ಟುಗೊಂಡವರೇ "ಎಂತಾ ರಗಳೆ ನಿಂದು ಎದ್ದೋಗ್" ಎಂದು ಹೇಳಿ ಮುಗಿಸುವುದರಷ್ಟರಲ್ಲಿ ನಾನು ಚೌಕಿಗೆ ಓಡಿಯಾಗಿತ್ತು. ಮುಖ್ಯ ಚಂಡೆವಾದಕನು ಹೆದರಿ ಚೌಕಿಯಲ್ಲೇ ಮುದುರಿ ಕುಳಿತ. ಪ್ರಸಂಗದ ಅರ್ಧ ಭಾಗ ಕೇವಲ ಮದ್ದಲೆವಾದನ ದೊಂದಿಗೆ ಕಳೆಯಿತು. ಮಧ್ಯೆ ಅವರು ಓಳಗೆ ಬಂದಾಗ ನಾನು ವಿನಯದಿಂದ ಅವರಲ್ಲಿ ’ ನಂಗೆ ಚಂಡೆ ಶೃತಿ ಮಾಡಕ್ಕೆ ಹೆಚ್ಚು ಅನುಭವ ಇಲ್ಲೆ, ತಪ್ಪಾದರೆ ನಿಮ್ಮ ಹೊಟ್ಟಿಗೆ ಹಾಕ್ಯಳಿ’ ಎಂದು ಬೆಪ್ಪನಂತೆ ಕೈಕಟ್ಟಿಕೊಂಡು ನಿಂತೆ. ’ಹ್ಹೂಂ ಎಲ್ಲಾ ಹೊಟ್ಟಿಗೆ ಹಾಕ್ಯಂಡೆ ನನ್ನ ಹೊಟ್ಟೆ ಇಷ್ಟು ದೊಡ್ಡ ಆಯ್ದು, ನಡಿ ನಡಿ ರಂಗಸ್ಥಳಕ್ಕೆ ಚಂಡೆ ಹಿಡ್ಕ, ಮದ್ದಲೆಗಾರನ(ಪರಮೇಶ್ವರ ಭಂಡಾರಿ,ಕರ್ಕಿ) ಹತ್ರ ಶೃತಿ ಮಾಡಿಕೊಡಕ್ಕೆ ಹೇಳು’ ಎಂದು ಗರ್ಜಿಸಿದರು. ಹೀಗೆ ಪ್ರಸಂಗ ಮುಗಿಯಿತು. ನಾನು ಒಳಗೆ ಬಂದೆ. ವೇಶ ಕಳಚಿಟ್ಟವರೆ ನನ್ನನ್ನು ಕರೆದು ’ ಆ ಚಂಡೆ ತಗಬಾ, ನಾ ಹೇಳ್ತೆ ಹೆಂಗೆ ಸುರ್ತಾನ್ ಮಾಡದು ಅಂತ’ ಎಂದಾಗ ನನಗೆ ಆಶ್ಚರ್ಯ. ಸರಿ ಎಂದು ಚಂಡೆಯನ್ನು ಅವರ ಮುಂದೆ ಇಟ್ಟಾಗ ಅದನ್ನು ಸುರ್ತಾನ್ (ಶೃತಿ) ಮಾಡುವ ಟೆಕ್ನಿಕ್ ಹೇಳಿಕೊಟ್ಟರು. ನನಗೆ ಆ ವಾದನ ಶೃತಿ ಮಾಡುವ ಕ್ರಮ ತಿಳಿದಿದ್ದೇ ಆವಾಗ!!! . ಇದು ಹಿಂಗಂತ ನಂಗೆ ಗೊತ್ತಿರ್ಲೆ ತುಂಬಾ ಉಪಕಾರಾತು ಎಂಬ ನನ್ನ ಮಾತಿನತ್ತ ವಿಶೇಷ ಗಂಭೀರ ನಗೆಯೊಂದನ್ನು ಬೀರಿದರು. ಆ ವಕ್ರಹಲ್ಲಿನ ಬಾಯ ನಗುವೇ ಒಂದು ಚಂದ. ಆಗ ಅಲ್ಲೇ ಇದ್ದ ಕೊಳಗಿ ಅನಂತಜ್ಜ ’ಅಪ್ಪೀ ಯಕ್ಷಗಾನದಲ್ಲಿ ಚಂಡೆ ಶೃತಿ ಮಾಡದು ಹೇಂಗೆ ಅಂತಾ ಮೊದಾಲ್ ತೋರಿಸಿದವರೇ ಅವ್ರು ಎಂದಾಗ ನನಗೆ ಆನಂದವಾಯಿತು. ಅಷ್ಟು ದೊಡ್ಡ ಮನುಷ್ಯ ನನಗೂ ಅದರ ಟೆಕ್ನಿಕ್ ತಿಳಿಸಿದನಲ್ಲ ಎಂದು. ನಾನು ಸುಮ್ನೆ ಅವರಲ್ಲಿ ಇದರ ಮುಚಿಗೆ ಯಾವ ಚರ್ಮದ್ದು ಅಂತ ಕೇಳಿದಾಗ ಹುಸಿ ಕೋಪದಿಂದ ಸರಿ ಬಾರ್ಸದೆ ಹಡೇ ಮಾಡಿದ್ರೆ ನಿನ್ನ ಬೆನ್ನಿನ ಚರ್ಮ ಸುಲಿದು ಮುಚಿಗೆ ಮಾಡ್ಸ್ತೆ ಎಂದರು. ೨-೩ ಡಬ್ಬಲ್ ಪೆಟ್ಟು ಬಾರ್ಸುವ ವಿಧಾನ ಹೇಳಿಕೊಟ್ಟರು. ಈ ಆಟಕ್ಕು ಮೊದಲು ನಾನು ಅವರ ಪಾತ್ರಕ್ಕೆ ಚಂಡೆ ಬಾರಿಸಿರಲಿಲ್ಲವಾದರೂ ಅವರಲ್ಲಿ ಸುಮ್ಮನೇ ಮಾತನಾಡುತಿದ್ದೆ. ಅವರು ಹೇಳಿದ್ದಕ್ಕಲ್ಲ ಹೂಹಾಕುವುದಷ್ಟೇ ನನ್ನ ಕೆಲ್ಸವಾಗಿತ್ತು. ಈ ಆಟದ ನಂತರ ೩-೪ ಪಾತ್ರಗಳಿಗೆ ಚಂಡೆಗಾರನಾಗಿ ಒದಗುವ ಸಂಧರ್ಭ ಬಂದಿದ್ದರೂ ಅಲ್ಲಿ ಯಾವ ತಾಪತ್ರಯವುಂಟಾಗಲಿಲ್ಲ.

ಅದಾದ ನಂತರ ಅವರನ್ನು ಕಂಡಿದ್ದು ಹೊಸನಗರ ರಾಮಚಂದ್ರಾಪುರಲ್ಲಿ ನಡೆದ ಯಕ್ಷಗಾನ ಸಮ್ಮೇಳನದಲ್ಲಿ(೨೦೦೨)
ಅವರು ಸಮ್ಮೇಳನದ ಅಧ್ಯಕ್ಷರು. ೩ ದಿನದ ಕಾರ್ಯಕ್ರಮ. ಹೊರಗಡೆ ಒಂದು ಸಾಟಿ ಪಂಜೆ ಉಟ್ಟು ತಿರುಗಾಡುತಿದ್ದರು, ಸಕ್ಕರೆ ಕಾಯಿಲೆಯಿಂದಾಗಿ ಪದೇ ಪದೇ ಮೂತ್ರವಿಸರ್ಜನೆ ಮಾಡಬೇಕಾದ ಪರಿಸ್ತಿತಿ ಇತ್ತು. ಅವರ ಹತ್ರ ಹೋದ ನಾನು ’ಅಜ್ಜ ನಾನು ಅಪ್ಪಿ ಚಂಡೆ ಬಾರ್ಸ್ತ ಇದ್ದ್ನಲಾ’ ಅಂದೆ ಸಲುಗೆಯಿಂದ. ಸರಿ ಶುರುವಾಯಿತು ಮಾತಿನ ವರಸೆ. ಎಲ್ಲಿದ್ದೆ, ಎಂತಾ ಮಾಡ್ತಾ ಇದ್ದೆ ಎಲ್ಲಾ ಕೇಳಿದರು. ಈಗೆಲ್ಲಾ ಕೆಲವು ಗಣಗಾಂಪರೆಲ್ಲಾ ಆಟ ಮಾಡದು ನೋಡಿದ್ರೆ ತಮಾ ಎಂದು ತಮ್ಮ ಅಸಹನೆ ವ್ಯಕ್ತ ಪಡಿಸಿದರು. ಪುಣ್ಯಕ್ಕೆ ಆಟದ ವಿಷಯ ನಾನು ಮಾತಾಡಿರಲಿಲ್ಲ, ಇಲ್ಲದೇ ಹೋದರೆ ನನ್ನ ಬುಡಕ್ಕೇ ಬರುತ್ತಿತ್ತು. ಅಲ್ಲಿ ಅವರು ಮಾಡಿದ ಅಧ್ಯಕ್ಷ ಬಾಷಣವು ಜೀವಮಾನದಲ್ಲಿ ನಾನು ನೋಡಿದ ಅತ್ಯುತ್ತಮ ಭಾಷಣಗಳಲ್ಲಿ ಒಂದು.

ಕಳೆದ ನವೆಂಬರನಲ್ಲಿ (ನವೆಂಬರ ೧೨, ೨೦೦೮) ಅವರ ಕುರಿತಾದ ಪುಸ್ತಕ ಬಿಡುಗಡೆ, ಸನ್ಮಾನ ಕಾರ್ಯಕ್ರಮಕ್ಕೆ ಬಂದಿದ್ದರು. ಅವತ್ತು ಯಕ್ಷಗಾನದ ಗಣಪತಿ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು, ಇದರಲ್ಲಿ ಭಾಗವಹಿಸುವ ಪುಣ್ಯ ನನ್ನದಾಯಿತು. ನೆಬ್ಬೂರು ಭಾಗವತರು, ಎ.ಪಿ. ಫಾಟಕ್ ಹಾಗು ನಾನು ಪ್ರಾರ್ಥನೆಯನ್ನು ಮುಗಿಸಿದೆವು ಅವರನ್ನು ಮಾತಾಡಿಸಿದಾಗ ಮೊದಲು ಗುರುತು ಸಿಗಲಿಲ್ಲ. ಆಮೇಲೆ ಪ್ರಾರ್ಥನೆಗೆ ಚಂಡೆ ಬಾರಿಸಿದನ್ನು ನೋಡಿದ ಅವರು ’ಚಂಡೆ ಅಪ್ಪಿಯನಾ’ ಎಂದು ಗುರುತಿಸಿದಾಗ ಜೀವನ ಸಾರ್ಥಕವೆನಿಸಿದ ಅನುಭವವಾಯಿತು.

ನೋಡಲು ಸುಮಾರಿಗೆ ನನ್ನ ಅಜ್ಜನ ಪ್ರತಿರೂಪದಂತೇ ಇದ್ದ ಅವರನ್ನು ನಾನು ಅಜ್ಜ ಎಂದೇ ಸಂಭೋದಿಸುತ್ತಿದ್ದೆ. ಮೊನ್ನೆ ೨೯ ರಂದು ಸುಮಾರು ೧:೩೦ ಕ್ಕೆ ಅವರು ನಿಧನರಾದರೆಂದು ಸುದ್ದಿ ಬಂದಾಗ ಒಮ್ಮೆಲೆ ಜೀವವು ಚಡಪಡಿಸಿತು. ರಂಗದ ಮೇಲೆ ನನಗೆ ಅತ್ಯಂತ ಹಿಡಿಸಿದ ಪಾತ್ರಧಾರಿಯೆಂದರೆ( ಪ್ರೇಕ್ಷಕನಾಗಿ) ಮಹಾಬಲ ಹೆಗಡೆ. ಮೇಳದ ಆ ಕಿರು ತಿರುಗಾಟದಲ್ಲಿ, ಅವರ ಹತ್ರ ಬೈಸಿಕೊಂಡ, ಮಾತಾಡಿದ ಎಲ್ಲವೂ ನೆನಪಾಯಿತು. ಆ ನೆನಪಿನೊಂದಿಗೇ ಈ ಬರಹವನ್ನು ಇಲ್ಲಿ ಇಳಿಸಿದ್ದೇನೆ. ಭಗವಂತನು ಅವರ ಆತ್ಮಕ್ಕೆ ಶಾಂತಿ ಕೊಡಲಿ, ಅವರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿ ಕೊಡಲಿ ಎಂಬ ಪ್ರಾರ್ಥನೆ ಯೊಂದಿಗೆ ಮುಕ್ತಾಯಗೊಳಿಸುತ್ತಿದ್ದೇನೆ.

5 comments:

Ragu Kattinakere said...

Amazing write. You were very lucky to be associated. I have only heard and seen him only once. One more time I heard him speak. The rest is by word of mouth. He is supposed to have remarked once that the best award he got was when Shivarama Karantha felicitated him. You should send this to a news paper. A lot of people will like reading this.

Unknown said...

Houda, baree chenagi baradde. keep writing. People like us can benefit from this.

Unknown said...

It is very well described Shri Mahabala Hegde!
I felt, it is from bottom of your heart. I hope the same impression would have been with most of us too.Indeed this experience of yours is worth sharing with kalabhimani and 'Mahabala'abhimani around the world.
I join you in paying homage to him as I gained , influenced, motivated somuch by him.
Vinayak Hegde, Kallabhag

vinayak avadhani said...

Very nice Amrutha.Very well written. I have seen this legend performing from my childhood (Bhagavathike, Vesha, Kammata etc) in several occasions. What you said is very much right and correct

Please keep writing.Being an artist your views and experiences are totally different.

Ganapati Hegde Kappekere said...

Naa bahuvaagi mechchida kalavida.. Nijarthadallu yakshaganadalli Krushi madidavaru.. Nanage hechchu patragalanna noduva adrushta matra irlilla :(