Tuesday, November 3, 2009

ಹಡಿನಬಾಳ ಯಕ್ಷಪರ್ವ ನಾ ಕಂಡಂತೆ -- ಮುಂದುವರೆದುದು

ಆಟದ ದಿನ ನಿರೀಕ್ಷಿಸಿದಂತೆ ಜನಸಾಗರವೇ ಸೇರಿತ್ತು. ಮೊದಲ ಭಾಗದ ಬಲರಾಮ ಪಾತ್ರ ಮಾಡಿದ ಸುಧೀಂದ್ರ ಹೊಳ್ಳರ ಪ್ರವೇಶದಿಂದ ಶುರುವಾದದ್ದು ನಂತರ ಯಲಗುಪ್ಪ ಸುಬ್ರಹ್ಮಣ್ಯರ ಸುಭದ್ರೆ ಪ್ರವೇಶ ಹಾಗೂ ಬಲರಾಮ- ಸುಭದ್ರೆ ಯರ ಸಂಭಾಷಣೆ ರೋಚಕವಾಗಿತ್ತು. ಯಾವತ್ತು ಸರಿಯಾದ ಹೋಮ್ ವರ್ಕ್ ಮಾಡಿಕೊಂಡೇ ರಂಗಕ್ಕಿಳಿಯುವ ಹೊಳ್ಳರು ಸಮರ್ಥವಾಗಿ ಬಲರಾಮನ ವಾದ ಮಂಡಿಸಿದರು. ಆಭಿಮನ್ಯುವಿನ ಪಾತ್ರಧಾರಿ ಅರ್ಪಿತಾ ಹೆಗಡೆ ಕುಣಿತದಲ್ಲಿ ಮಿಂಚಿದರೂ ವೇಷಭೂಷಣವೆಲ್ಲ ಕಳಚಿಕೊಂಡಿದ್ದು ಅಬಾಸವೆನಿಸಿತು. ಆನಂತರ ಪ್ರವೇಶವಾದದ್ದು ಮುಖ್ಯ ಆಕರ್ಷಣೆಯಾಗಿದ್ದ ಶ್ರೀಪಾದ ಹೆಗಡೆಯವರು. ಘಟೋತ್ಕಚನ ಸಾಂಪ್ರದಾಯ ಒಡ್ಡೋಲಗ ಮಾಡಿದ್ದು ಅತ್ಯಂತ ಸಮಯೋಚಿತವೆನಿಸಿತು. ನಂತರ ಅಭಿಮನ್ಯು- ಘಟೋತ್ಕಚರ ಯುದ್ಧ, ಸುಭದ್ರೆಯ ರೋಧನೆ, ಸುಭದ್ರೆ-ಘಟೋತ್ಕಚ ಸಂಬಾಷಣೆ ಎಲ್ಲೂ ಬೀಳಾಗಲಿಲ್ಲ ಈ ಸನ್ನಿವೇಶದ ನಂತರ ಅಭಿನಂದನಾ ಕಾರ್ಯಕ್ರಮವಿತ್ತು. ಮನಸ್ಸಿನ ಭಾವನೆಗಳನ್ನು ಹತ್ತಿಕ್ಕಿಕ್ಕೊಂಡು ಮಾತಾಡಿದ ಶ್ರೀಪಾದ ಹೆಗಡೆಯವರು ನನಗೆ ನಿಮ್ಮೆಲರ ಅಭಿಮಾನವಿದ್ದರೆ ಸಾಕು ಅನುಕಂಪ ಬೇಡ, ನಮ್ಮ ಮನೆಯಲ್ಲಿ ಟಿವಿ ಮೊದಲಾದ ಪರಿಕರಗಳಿಲ್ಲ ಅಂದು ನಮ್ಮ ಮನೆಯಲ್ಲಿ ಯಾರಿಗೂ ಬೇಸರವಿಲ್ಲ ಎಂದು ಮಾರ್ಮಿಕ ವಾಗಿ ನುಡಿದರು.

ಆನಂತರ ಕಥಾಭಾಗ ಮುಂದುವರೆಯಿತು. ಸುಬ್ರಹ್ಮಣ್ಯ ಚಿಟ್ಟಾಣಿಯವರ ಆರಕ್ಕೇರದ ಮುರಕ್ಕಿಳಿಯದ ಕೃಷ್ಣ, ಅಪರೂಪಕ್ಕೆ ಬಲರಾಮನ ಪಾತ್ರ ಮಾಡಿದ ಚಿಟ್ಟಾಣಿಯವರ ಅದ್ಭುತವೆನಿಸುವ ರಂಗ ಚಲನೆ ಮುದ ನೀಡಿತು.

ಹಿಮ್ಮೇಳದಲ್ಲಿ ಭಾಗವತರಾಗಿ ಕೊಳಗಿ ಕೇಶವ ಹೆಗಡೆ ಮತ್ತು ಸರ್ವೇಶ್ವರ ಹೆಗಡೆ, ಮದ್ದಳೆಯಲ್ಲಿ ನಾಗರಾಜ ಭಂಡಾರಿ ಮತ್ತು ಗಣೇಶ ಭಂಡಾರಿ, ಚಂಡೆಯಲ್ಲಿ ಅಮೃತದೇವ ಮತ್ತು ಮುರೂರು ಸುಬ್ರಹ್ಮಣ್ಯ ಸಹಕರಿಸಿದರು.

ಅಂತೂ ಹಡಿನಬಾಳ ಯಕ್ಷಪರ್ವ ಎಂಬ ಕಾರ್ಯಕ್ರಮದಲ್ಲಿ, ಆಟ ಹಾಗೂ ಸಭಾ ಕಾರ್ಯಕ್ರಮ ಎರಡು ಸಮಯೋಚಿತವಾಗಿ ಮೂಡಿ ಬಂದ ಕಾರಣ ಇದೊಂದು ಉತ್ತಮ ಪ್ರಯೋಗವಾಗಿ ಹೊಮ್ಮಿ ಬಂದಿತು.

No comments: